ನಿಮಗೆ ಗೊತ್ತೇ ಶ್ರೀ ಮಾರಿಕಾಂಬಾ ದೇವಾಲಯವು ಕರ್ನಾಟಕದ ಪ್ರಸಿದ್ಧ ಹಿಂದೂ ದೇವಾಲಯ, ಹಾಗೂ ಶಕ್ತಿ ಪೀಠಗಳಲ್ಲಿ ಒಂದು.
ಶಿರಸಿ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಈ ಸ್ಥಳವು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಾದ ಕಾಡುಗಳಿಗೆ ಹೆಸರುವಾಸಯಾಗಿದೆ. ಈ ಊರಿನಲ್ಲಿ ಅತಿ ಪ್ರಸಿದ್ಧವಾದ ಶ್ರೀ ಮಾರಿಕಾಂಬಾ ದೇವಸ್ಥಾನ ಸಹ ಇದೆ. ಶ್ರೀ ಮಾರಿಕಾಂಬಾ ಜಾತ್ರೆ ಶಿರಸಿ ಎರಡು ವರ್ಷಕ್ಕೊಮ್ಮೆ ಒಂಬತ್ತು ದಿನಗಳ ಕಾಲ ನಡೆಯುತ್ತದೆ. ಶಿರಸಿಯು ಅಡಿಕೆ ತೋಟಗಳು, ಕಾಡುಗಳು ಹಾಗೂ ಜಲಪಾತಗಳಿಂದ ಸುತ್ತುವರಿಯಲ್ಪಟ್ಟಿದೆ. ರಮಣೀಯ ದೃಶ್ಯ ಮನಮೋಹಕವಾಗಿದೆ.
ಊರಿನ ಸನಿಹ ಇರುವ ಕೆಲವು ರಮಣೀಯ ಸ್ಥಳಗಳು ಯಾಣ, ಬನವಾಸಿ, ಸೊಂದಾ ಮಠ, ಸಹಸ್ರಲಿ೦ಗ, ಮೋರೆಗಾರ ಜಲಪಾತ, ಕುಮುಟಾಯಿಂದ ಶಿರಸಿಗೆ ಹೊಗುವ ದಾರಿಯಲ್ಲಿ ಸಿಗುವ ದೇವಿಮನೆ ಘಟ್ಟ ನೊಡಲು ಬಹಳ ಆಕರ್ಷಣೀಯ ವಾಗಿದೆ. ಇದು ಕಾಡಿನಿಂದ ಆವರಿಸಲ್ಪಟ್ಟಿದೆ.
ಈ ದೇವಾಲಯದ ಪ್ರವೇಶದ್ವಾರದ ಎರಡೂ ಕಡೆಗಳಲ್ಲಿ ದೊಡ್ಡದಾದ ಆನೆಗಳ ಶಿಲ್ಪಗಳಿವೆ. ದೇವಾಲಯದ ಒಳ ಪ್ರವೇಶಿಸುತ್ತಿದ್ದಂತೆಯೇ ವಿಶಾಲವಾದ ಸಭಾಭವನವಿದೆ. ಸಭಾಭವನದ ಗೋಡೆಗಳ ಮೇಲೆ ವರ್ಣರಂಜಿತ ಚಿತ್ರಗಳು ರಾರಾಜಿಸುತ್ತಿವೆ. ಅಲ್ಲಿನ ಪ್ರಶಾಂತ ವಾತಾವರಣ ಮನಸ್ಸನ್ನು ಮುದಗೊಳಿಸುವಂತಿದೆ.
೧೬೮೮ರಲ್ಲಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವನ್ನು ನಿರ್ಮಿಸಲಾಯಿತು. ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯ ಸಹೋದರಿಯಾದ ಈ ದೇವಿಯ ದೇವಾಲಯವನ್ನು ದೊಡ್ಡಮ್ಮನ ದೇವಸ್ಥಾನ ಎಂದು ಕೂಡಾ ಕರೆಯುತ್ತಾರೆ.
ಜೀವನದಲ್ಲಿ ಕೈ ಸೋತವರು, ಇನ್ನೇನು ಮಾಡಲು ಸಾಧ್ಯವಿಲ್ಲ ಎಂದುಕೊಳ್ಳುತ್ತಿರುವವರು ಒಮ್ಮೆ ದೇವಿಯ ಸಾನಿಧ್ಯದಲ್ಲಿ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡರೆ ಖಂಡಿತ ಅದು ಫಲಿಸುತ್ತದೆಯಂತೆ. ಅಷ್ಟು ಶಕ್ತಿಯನ್ನು ಹೊಂದಿರುವ ತಾಯಿ ಈ ಮಾರಿಕಾಂಬೆ. ದೇವಿಯ ಅನುಗ್ರಹದಿಂದ ಒಳ್ಳೆಯದಾದ ಹಲವಾರು ಉದಾಹರಣೆಗಳಿವೆ. ಸಾದ್ಯವಾದರೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ, ತಾಯಿಯ ಅನುಗೃಹಕ್ಕೆ ಪಾತ್ರರಾಗಿ.